ಶ್ರೀ ಯುಕ್ತೇಶ್ವರ ಗಿರಿ (10 ಮೇ 1855 – 9 ಮಾರ್ಚ್ 1936) ಇವರ ಪೂರ್ವಾಶ್ರಮದ ಹೆಸರು ಪ್ರಿಯಾನಾಥ ಕರಾರ್, ಇವರು ಸತ್ಯಾನಂದ ಗಿರಿ ಮತ್ತು ಪರಮಹಂಸ ಯೋಗಾನಂದರ ಗುರುಗಳು. ಇವರು ಲಾಹಿರಿ ಮಹಾಶಯರ ಶಿಷ್ಯರು. ಯೋಗಾನಂದರು ಇವರನ್ನು "ಜ್ಞಾನಾವತಾರ" (ಜ್ಞಾನದ ಅವತಾರ ಪುರುಷ) ಎಂದು ಕರೆದರು. ಇವರೊಬ್ಬ ಕ್ರಿಯಾಯೋಗಿ, ಜ್ಯೋತಿಷಿ ಮಾತ್ರವಲ್ಲದೆ ಭಗವದ್‍ಗೀತೆ ಮತ್ತು ಬೈಬಲ್ ಕುರುತಾಗಿ ಅಗಾಧ ಜ್ಞಾನ ಹೊಂದಿದ್ದರು. == ಪೂರ್ವಾಶ್ರಮ == ಪ್ರಿಯಾನಾಥ ಕರಾರ್ (ಯುಕ್ತೇಶ್ವರ) ಕ್ಷೇತ್ರನಾಥ ಕರಾರ್ ಮತ್ತು ಕದಂಬಿನಿ ದಂಪತಿಯರ ಪುತ್ರನಾಗಿ ಸಿರಾಂಪುರದಲ್ಲಿ ಜನಿಸಿದರು. ಬಹಳ ಸಣ್ಣ ವಯಸ್ಸಿನಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡ ಇವರು ತಮ್ಮ ಕುಟುಂಬದ ಭೂಜವಾಬ್ದಾರಿಯನ್ನು ಹೊರಬೇಕಾಯಿತು. ಸಿರಾಂಪುರದ ಕ್ರೈಸ್ತ ಮಿಶನರಿ ಕಾಲೇಜಿನಲ್ಲಿ ಕಲಿಯುವಾಗ ಬೈಬಲ್ ಕುರಿತಾಗಿ ಆಸಕ್ತಿಯನ್ನು ತಳೆದರು. ಇವರು ಕಾಲೇಜು ಶಿಕ್ಷಣವನ್ನು ಮುಗಿಸಿದ ಬಳಿಕ ಮದುವೆಯಾಗಿ ಒಂದು ಮಗಳನ್ನು ಪಡೆದಿದ್ದರು. == ಗುರುವಿನ ಸಂಪರ್ಕದಲ್ಲಿ == 1884ರಲ್ಲಿ ಪ್ರಯಾನಾಥನು ವಾರಣಾಸಿಯ ಲಾಹಿರಿ ಮಹಾಶಯರನ್ನು ಭೇಟಿಯಾದರು.ತದನಂತರ ಅವರಿಂದ ಕ್ರಿಯಾಯೋಗ ದೀಕ್ಷೆಯನ್ನು ಪಡೆದು ಅವರ ಶಿಷ್ಯರಾದರು.1894ರ ಅಲಹಾಬಾದಿನ ಕುಂಭಮೇಳದಲ್ಲಿ ತಮ್ಮ ಪರಮಗುರುಗಳಾದ ಮಹಾವತಾರ ಬಾಬಾಜಿಯವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅವರು ಪ್ರಿಯಾನಾಥರಿಗೆ ಹಿಂದು ಹಾಗು ಕ್ರೈಸ್ತ ಧರ್ಮಗಳ ತತ್ವಸಿದ್ದಾಂತಗಳ ಹೋಲಿಕೆಯನ್ನು ಕುರಿತು ಒಂದು ಕೃತಿ ರಚಿಸುವಂತೆ ಹೇಳಿದರು. ಅದೇ ವರ್ಷ ಅವರು ಈ ಕೃತಿಯನ್ನು ಮುಗಿಸಿದರು, ಅದನ್ನು ಕೈವಲ್ಯ ದರ್ಶನಂ (ದಿ ಹೋಲಿ ಸಾಯನ್ಸ್) ಎಂದು ಹೆಸರಿಸಿದರು.